ಕೈಷಿ‌ ಇಲಾಖೆಯ ಹೊರಗುತ್ತಿಗೆ ನೌಕರರ ವೇತನ ಬಾಕಿ: ಜಯ ಕರ್ನಾಟಕ ಜನಪದ ವೇದಿಕೆ ಆಗ್ರಹ

ವರದಿಗಾರರುSite Administrator
ಪ್ರಕಟಣೆ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಕೈಷಿ‌ ಇಲಾಖೆಯ ಹೊರಗುತ್ತಿಗೆ ನೌಕರರ ವೇತನ ಬಾಕಿ: ಜಯ ಕರ್ನಾಟಕ ಜನಪದ ವೇದಿಕೆ ಆಗ್ರಹ

ಕಲಬುರಗಿ: ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ 'ಹಿಂದುಸ್ಥಾನ್ ಸೆಕ್ಯೂರಿಟಿ ಸರ್ವೀಸಸ್' ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಕೆಲವು ಹೊರಗುತ್ತಿಗೆ ನೌಕರರಿಗೆ ಕಳೆದ 10 ರಿಂದ 12 ತಿಂಗಳುಗಳಿಂದ ನಿಯಮಿತ ವೇತನ ಪಾವತಿಯಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು 'ಜಯ ಕರ್ನಾಟಕ ಜನಪದ ವೇದಿಕೆ'ಯು ದೂರು ಸಲ್ಲಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.

ಮಾಸಿಕ ಸಂಬಳವನ್ನೇ ನಂಬಿಕೊಂಡಿರುವ ನೌಕರರ ಕುಟುಂಬಗಳು ಮನೆ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ಚಿಕಿತ್ಸೆಗಳಿಗಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಸಂಘಟನೆಯವರು ಕಳವಳ ವ್ಯಕ್ತಪಡಿಸಿದ್ದಾರೆ.

 ಹೊರಗುತ್ತಿಗೆ ಸಂಸ್ಥೆಯ ದೂರವಾಣಿ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಯಾರೂ ಸ್ವೀಕರಿಸಿಲ್ಲ. ಕಚೇರಿಯಲ್ಲಿ ಹಾಜರಾತಿ, ವೇತನ ಪಾವತಿ, ಇಲಾಖೆಯಿಂದ ಸಂಸ್ಥೆಗೆ ಬಿಡುಗಡೆಯಾದ ಹಣ, ಬಿಲ್ ಹಾಗೂ PF/ESI ದಾಖಲೆಗಳನ್ನು ಕೇಳಿದರೂ ನೀಡಲಾಗಿಲ್ಲ. ನಿಯಮಿತ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿದ್ದರೂ, ಹೊರಗುತ್ತಿಗೆ ನೌಕರರಿಗೆ 10-12 ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವುದು ಕಾರ್ಮಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಜಯ ಕರ್ನಾಟಕ ಜನಪದ ವೇದಿಕೆಯ ಮುಖ್ಯ ಆಗ್ರಹಗಳು:

ದೂರನ್ನು ಆರೋಪಿತ ಕಚೇರಿಗೇ ಒಪ್ಪಿಸದೆ, ಕಾರ್ಮಿಕ ಇಲಾಖೆ ಅಥವಾ ಸ್ವತಂತ್ರ ಹಿರಿಯ ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಂಪೂರ್ಣ ಬಾಕಿ ವೇತನವನ್ನು 7 ದಿನಗಳಲ್ಲಿ ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಇಲಾಖೆಯಿಂದ ಸಂಸ್ಥೆಗೆ ಹಣ ಬಿಡುಗಡೆಯಾಗಿದೆಯೇ, PF/ESI ಪಾವತಿಯಾಗಿದೆಯೇ ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿಸಬೇಕು.

ಕಠಿಣ ಕ್ರಮಕ್ಕೆ ಒತ್ತಾಯ:  ತನಿಖೆಯಲ್ಲಿ ಲೋಪ ಅಥವಾ ಒಪ್ಪಂದ ಉಲ್ಲಂಘನೆ ಸಾಬೀತಾದರೆ ಸಂಸ್ಥೆಯ ವಿರುದ್ಧ ಬಾಕಿ ವಸೂಲಿ, ಠೇವಣಿ ಜಪ್ತಿ ಮತ್ತು ಸಂಸ್ಥೆಯನ್ನು ಕಪ್ಪುಪಟ್ಟಿಗೆ (Blacklist) ಸೇರಿಸಬೇಕು. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ದೂರು ನೀಡಿದ ಕಾರಣಕ್ಕೆ ನೌಕರರನ್ನು ಕೆಲಸದಿಂದ ತೆಗೆಯಬಾರದು, ಹಾಜರಾತಿ ನಿರಾಕರಣೆ ಅಥವಾ ಬೆದರಿಕೆ ಹಾಕಬಾರದು. ಶೋಷಣೆ ಮುಂದುವರಿದಲ್ಲಿ ಕಚೇರಿ ಎದುರಿಗೆ ಧರಣಿ ಮತ್ತು ಸತ್ಯಾಗ್ರಹ ನಡೆಸುವುದಾಗ ಸಂಘಟನೆಯ ಮುಖ್ಯಸ್ಥ ಉಮೇಶ ಬಿರ್ಬಿಟ್ಟೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.