ಬೀದರ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಹರಾಜು ಪ್ರಕ್ರಿಯೆ ತಡೆಯಲು ಹಾಗೂ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಅಭಿಷೇಕ್ ಪಾಟೀಲ ರಾಜೀನಾಮೆ ನೀಡಿದ್ದು, ಇದೀಗ ನೈತಿಕ ಹೊಣೆ ಹೊತ್ತು ಹುಮನಾಬಾದ್ ಶಾಸಕರು ಕೂಡ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಆಗ್ರಹಿಸಿದ್ದಾರೆ.
ಬೀದರ ನಗರದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿದೆ. ಈ ಕಾರ್ಖಾನೆಯನ್ನು ಪುನಃ ಆರಂಭಿಸಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರಲು ಹಲವು ಬಾರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಕುರಿತು ವಿಧಾನ ಪರಿಷತ್ನ ಇಬ್ಬರು ಸದಸ್ಯರು ಕೂಡ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ಜೊತೆಗೆ ಹರಾಜು ಪ್ರಕ್ರಿಯೆ ತಡೆಯುವಂತೆ ಸಕ್ಕರೆ ಸಚಿವರು ಹಾಗೂ ಸಹಕಾರ ಸಚಿವರಿಗೂ ಸೂಕ್ತ ನಿರ್ದೇಶನ ನೀಡಲಾಗಿತ್ತು, ಎಂದರು.
ಒಂದು ವೇಳೆ ಈ ಕಾರ್ಖಾನೆಯನ್ನು ಹರಾಜು ಹಾಕಿದರೆ ರೈತರಿಗೆ ಹಾಗೂ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗಲಿದೆ. ಆದ್ದರಿಂದ ರೈತರ ಹಿತ ಕಾಪಾಡಲು ಬಿಎಸ್ಎಸ್ಕೆ ಕಾರ್ಖಾನೆಯನ್ನು ಲೀಸ್ ಆಧಾರದ ಮೇಲೆ ತಕ್ಷಣವೇ ಆರಂಭಿಸಬೇಕು. ರೈತರ ಹಿತದೃಷ್ಟಿಯಿಂದ ಈಗಾಗಲೇ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದು, ಬ್ಯಾಂಕ್ ಇತರೆ ನಿರ್ದೇಶಕರು ಹಾಗೂ ಹುಮನಾಬಾದ್ ಶಾಸಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
